ಅವರು ಅಲ್ಲಾಹನ ವತಿಯ ಅನುಗ್ರಹ ಮತ್ತು ಔದಾರ್ಯದೊಂದಿಗೆ ಮರಳಿದರು. ಯಾವುದೇ ಹಾನಿಯು ಅವರಿಗೆ ಬಾಧಿಸಲಿಲ್ಲ. ಅವರು ಅಲ್ಲಾಹನ ಸಂತೃಪ್ತಿಯನ್ನು ಅನುಸರಿಸಿದರು. ಅಲ್ಲಾಹನು ಮಹಾ ಔದಾರ್ಯವಂತನಾಗಿದ್ದಾನೆ.
ಸತ್ಯನಿಷೇಧಕ್ಕೆ ಧಾವಿಸಿ ಮುನ್ನುಗ್ಗುತ್ತಿರುವ ಜನರು ನಿಮ್ಮನ್ನು ದುಃಖಕ್ಕೀಡು ಮಾಡದಿರಲಿ. ಖಂಡಿತವಾಗಿಯು ಅವರು ಅಲ್ಲಾಹನಿಗೆ ಯಾವ ಹಾನಿಯನ್ನುಂಟು ಮಾಡಲಾರರು. ಅಲ್ಲಾಹನು ಪರಲೋಕದಲ್ಲಿ ಅವರಿಗೆ ಯಾವ ಪಾಲನ್ನೂ ನೀಡದಿರಲು ಇಚ್ಛಿಸಿದ್ದಾನೆ ಮತ್ತು ಅವರಿಗೆ ಮಹಾ ಕಠಿಣ ಶಿಕ್ಷೆಯಿದೆ.
ಸತ್ಯನಿಷೇಧಿಗಳಿಗೆ ನಾವು ಕಾಲಾವಕಾಶ ನೀಡುತ್ತಿರುವುದನ್ನು ತಮ್ಮ ಪಾಲಿಗೆ ಒಳಿತೆಂದು ಅವರು ಭಾವಿಸದಿರಲಿ. ಈ ಕಾಲಾವಕಾಶವು ಅವರ ಪಾಪಗಳಲ್ಲಿ ಇನ್ನಷ್ಟು ಮುಂದೆ ಸಾಗಲೆಂದಾಗಿದೆ. ಮತ್ತು (ಕೊನೆಗಂತು) ಅವರಿಗೆ ಅಪಮಾನಕರ ಶಿಕ್ಷೆಯಿರುವುದು.
ಶುದ್ಧರನ್ನು ಅಶುದ್ಧರಿಂದ ಬೇರ್ಪಡಿಸುವ ತನಕ ನೀವು ಈಗಿರುವ ಸ್ಥಿತಿಯಲ್ಲೇ ಸತ್ಯವಿಶ್ವಾಸಿಗಳನ್ನು ಅಲ್ಲಾಹನು ಬಿಟ್ಟು ಬಿಡುವುದಿಲ್ಲ ಮತ್ತು ಅಲ್ಲಾಹನು ನಿಮಗೆ ಅಗೋಚರ ಜ್ಞಾನವನ್ನು ಪ್ರಕಟಗೊಳಿಸುವುದಿಲ್ಲ. ಆದರೆ ಅಲ್ಲಾಹನು ತನ್ನ ಸಂದೇಶವಾಹಕರ ಪೈಕಿ ತಾನಿಚ್ಛಿಸುವವರನ್ನು (ಅಗೋಚರ ಜ್ಞಾನ ನೀಡುವುದಕ್ಕಾಗಿ) ಆಯ್ಕೆ ಮಾಡುತ್ತಾನೆ. ಆದ್ದರಿಂದ ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿಡಿರಿ. ನೀವು ವಿಶ್ವಾಸವಿಡುವವರು ಮತ್ತು ಭಯಭಕ್ತಿ ಪಾಲಿಸುವವರಾದರೆ ನಿಮಗೆ ಮಹಾ ಪ್ರತಿಫಲವಿದೆ.
ಅಲ್ಲಾಹನು ತನ್ನ ಅನುಗ್ರಹದಿಂದ ದಯಪಾಲಿಸಿರುವ ಧನದಲ್ಲಿ ಜಿಪುಣತೆ ತೋರುತ್ತಿರುವವರು ಜಿಪುಣತೆಯನ್ನು ತಮ್ಮ ಪಾಲಿಗೆ ಉತ್ತಮವೆಂದು ಭಾವಿಸದಿರಲಿ. ಆದರೆ ಅದು ಅವರಿಗೆ ಅತ್ಯಂತ ಕೆಟ್ಟದ್ದಾಗಿದೆ. ಸದ್ಯದಲ್ಲೇ ಪುನರುತ್ಥಾನದ ದಿನದಂದು ಅವರು ಜಿಪುಣತೆಯಿಂದ ಸಂಗ್ರಹಿಸಿರುವ ವಸ್ತುವನ್ನೇ ಅವರಿಗೆ ಕಂಠಕಡಗವನ್ನಾಗಿ ಹಾಕಲಾಗುವುದು. ಆಕಾಶಗಳ ಮತ್ತು ಭೂಮಿಯ ವಾರೀಸು ಹಕ್ಕು ಅಲ್ಲಾಹನದ್ದಾಗಿದೆ ಮತ್ತು ನೀವು ಮಾಡುತ್ತಿರುವುದರ ಕುರಿತು ಅಲ್ಲಾಹನು ಅರಿವುಳ್ಳನಾಗಿದ್ದಾನೆ.