ನಿಮಗೆ ಅಲ್ಲಾಹನ ಸೂಕ್ತಿಗಳನ್ನು ಓದಿ ಕೊಡಲಾಗುತ್ತಿದ್ದೂ (ನಿಮ್ಮ ಮಾರ್ಗದರ್ಶನಕ್ಕಾಗಿ) ನಿಮ್ಮ ಮಧ್ಯೆ ಅಲ್ಲಾಹನ ಸಂದೇಶವಾಹಕರಿದ್ದೂ ಕೂಡ ನೀವು ಸತ್ಯನಿಷೇಧಿಸುವುದಾದರೂ ಹೇಗೆ? ಯಾರು ಅಲ್ಲಾಹನ ಧರ್ಮವನ್ನು ಸದೃಢವಾಗಿ ಹಿಡಿಯುತ್ತಾನೋ ನಿಸ್ಸಂದೇಹವಾಗಿಯು ಅವನನ್ನು ಸನ್ಮಾರ್ಗದಲ್ಲಿ ಮುನ್ನಡೆಸಲಾಯಿತು.
ನೀವೆಲ್ಲರೂ ಒಟ್ಟಾಗಿ ಅಲ್ಲಾಹನ ಪಾಶವನ್ನು ಸದೃಢವಾಗಿ ಹಿಡಿದುಕೊಳ್ಳಿರಿ. ನೀವು ಭಿನ್ನರಾಗದಿರಿ ಮತ್ತು ಅಲ್ಲಾಹನು ನಿಮಗೆ ನೀಡಿದ ಅನುಗ್ರಹವನ್ನು ಸ್ಮರಿಸಿರಿ. ನೀವು ಪರಸ್ಪರ ಶತ್ರುಗಳಾಗಿದ್ದಾಗ ಅವನು ನಿಮ್ಮ ಹೃದಯಗಳನ್ನು ಬೆಸೆದನು. ಹಾಗೆಯೇ ಅವನ ಔದಾರ್ಯದಿಂದ ನೀವು ಸಹೋದರರಾಗಿ ಬಿಟ್ಟಿರಿ. ನೀವು ನರಕಾಗ್ನಿಯ ಅಂಚಿಗೆ ತಲುಪಿಬಿಟ್ಟಿದ್ದೀರಿ. ಅವನು ನಿಮ್ಮನ್ನು ರಕ್ಷಿಸಿದನು. ಇದೇ ಪ್ರಕಾರ ಅಲ್ಲಾಹನು ತನ್ನ ದೃಷ್ಟಾಂತಗಳನ್ನು ನೀವು ಸನ್ಮಾರ್ಗಪಡೆಯಲೆಂದು ನಿಮಗೆ ವಿವರಿಸಿಕೊಡುತ್ತಾನೆ.
ಒಳಿತಿನೆಡೆಗೆ ಆಹ್ವಾನಿಸುವ, ಸದಾಚಾರವನ್ನು ಆದೇಶಿಸುವ ಮತ್ತು ದುಷ್ಕೃತ್ಯಗಳಿಂದ ತಡೆಯುವಂತಹ ಒಂದು ಸಮುದಾಯವು ನಿಮ್ಮಲ್ಲಿರುವುದು ಅವಶ್ಯವಾಗಿದೆ ಮತ್ತು ಅವರೇ ವಿಜಯ ಹೊಂದುವವರಾಗಿದ್ದಾರೆ.
ಅಂದು ಕೆಲವು ಮುಖಗಳು ಬೆಳಗಲಿವೆ ಮತ್ತು ಕೆಲವು ಮುಖಗಳು ಕಪ್ಪಾಗಲಿವೆ. ಕಪ್ಪಾದ ಮುಖದವರೊಂದಿಗೆ ಹೇಳಲಾಗುವುದು: ನೀವು ವಿಶ್ವಾಸವನ್ನು ಸ್ವೀಕರಿಸಿದ ನಂತರ ನಿಷೇಧವನ್ನು ಕೈಗೊಂಡಿರಾ? ಇದೀಗ ನಿಮ್ಮ ಸತ್ಯನಿಷೇಧದ ಫಲವನ್ನು ಅನುಭವಿಸಿರಿ.
ಓ ಪೈಗಂಬರರೇ ಇವು ಅಲ್ಲಾಹನ ಸೂಕ್ತಿಗಳಾಗಿವೆ ಇದನ್ನು ನಾವು ನಿಮಗೆ ಸತ್ಯಪೂರ್ಣವಾಗಿ ಓದಿ ಕೇಳಿಸುತ್ತಿದ್ದೇವೆ ಮತ್ತು ಅಲ್ಲಾಹನು ಸರ್ವಲೋಕವಾಸಿಗಳೊಂದಿಗೆ ಅನ್ಯಾಯ ಮಾಡುವುದನ್ನು ಬಯಸುವುದಿಲ್ಲ.