(ಇದಕ್ಕೆ ತದ್ವಿರುದ್ಧವಾಗಿ) ಸತ್ಯನಿ಼ಷೇಧಿಗಳಿಗೆ ತಮ್ಮ ಸಂಪತ್ತಾಗಲೀ ಮತ್ತು ತಮ್ಮ ಸಂತಾನವಾಗಲೀ ಅಲ್ಲಾಹನ ಶಿಕ್ಷೆಯಿಂದ ಯಾವ ಪ್ರಯೋಜನವನ್ನೂ ನೀಡಲಾರದು. ಅವರು ನರಕವಾಸಿಗಳಾಗಿದ್ದಾರೆ. ಅವರು ಅದರಲ್ಲಿ ಶಾಶ್ವತವಾಗಿರುವರು.
ಇಹಲೋಕದಲ್ಲಿ ಸತ್ಯನಿಷೇಧಿಗಳು ವ್ಯಯಿಸುವ (ದಾನಧರ್ಮಗಳ) ಉಪಮೆಯು ಅತೀ ಶೀತವಿರುವ ಒಂದು ಭಯಂಕರ ಗಾಳಿಯು ಅಕ್ರಮಿ ಜನಾಂಗದ ಕೃಷಿಗೆ ಬೀಸಿ ಅದನ್ನು ಸಂಪೂರ್ಣ ನಾಶಗೊಳಿಸಿದಂತಿದೆ. ಅಲ್ಲಾಹನು ಅವರ ಮೇಲೆ ಅಕ್ರಮ ಮಾಡಲಿಲ್ಲ. ಆದರೆ ಅವರು ಸ್ವತಃ ತಮ್ಮ ಮೇಲೆ ಅಕ್ರಮವೆಸಗುತ್ತಿದ್ದಾರೆ.
ಓ ಸತ್ಯವಿಶ್ವಾಸಿಗಳೇ, ನೀವು ನಿಮ್ಮವರನ್ನಲ್ಲದೇ ಇತರರನ್ನು ನಿಮ್ಮ ರಹಸ್ಯದ ಆಪ್ತಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ಅವರು ನಿಮ್ಮ ಅವನತಿಗಾಗಿ ಸ್ವಲ್ಪವೂ ದಾಕ್ಷಿಣ್ಯವನ್ನು ತೋರಲಾರರು. ನೀವು ತೊಂದರೆಗೊಳಗಾಗಬೇಕೆAಬುದೇ ಅವರ ಉದ್ದೇಶವಾಗಿದೆ. ಅವರ ವಿದ್ವೇಷವು ಸ್ವತಃ ಅವರ ಬಾಯಿಯಿಂದಲೇ ಪ್ರಕಟವಾಗಿಬಿಟ್ಟಿದೆ. ಮತ್ತು ಅವರ ಹೃದಯಗಳಲ್ಲಿ ಅಡಕವಾಗಿರುವುದು ಇನ್ನೂ ಘೋರವಾಗಿದೆ. ನಾವು ನಿಮಗಾಗಿ ದೃಷ್ಟಾಂತಗಳನ್ನು ವಿವರಿಸಿ ಕೊಟ್ಟಿದ್ದೇವೆ, ನೀವು ಚಿಂತಿಸಿ ಗ್ರಹಿಸುವವರಾಗಿದ್ದರೆ?
(ಚಿಂತಿಸಿರಿ) ನೀವು ಅವರನ್ನು ಪ್ರೀತಿಸುತ್ತೀರಿ. ಅವರು ನಿಮ್ಮನ್ನು ಪ್ರೀತಿಸುವುದಿಲ್ಲ. ನೀವು ಎಲ್ಲಾ ಗ್ರಂಥಗಳಲ್ಲಿ ಸಂಪೂರ್ಣವಾಗಿ ವಿಶ್ವಾವಿಡುತ್ತೀರಿ (ಅವರು ವಿಶ್ವಾಸವಿಡುವುದಿಲ್ಲ) ಅವರಂತೂ ನಿಮ್ಮನ್ನು ಭೇಟಿಯಾದಾಗ ನಾವು ವಿಶ್ವಾಸವಿಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ ಏಕಾಂತದಲ್ಲಿ ಆಕ್ರೋಶದಿಂದ ತಮ್ಮ ಬೆರಳುಗಳನ್ನು ಕಚ್ಚುವರು. ಹೇಳಿರಿ: ದುರ್ದೈವಿಗಳೇ ನೀವು ನಿಮ್ಮ ಆಕ್ರೋಶದಲ್ಲೇ ಸಾಯಿರಿ. ಅಲ್ಲಾಹನು ಹೃದಯಗಳಲ್ಲಿರುವ ರಹಸ್ಯವನ್ನು ಚೆನ್ನಾಗಿ ಅರಿಯುತ್ತಾನೆ.
ನಿಮಗೆ ಒಳಿತು ಲಭಿಸಿದರೆ ಅವರಿಗೆ ಸಂಕಟವಾಗುತ್ತದೆ. ಇನ್ನು ನಿಮಗೆ ಕೆಡಕು ಒದಗಿದರೆ ಅವರು ಹರ್ಷ ಪಡುತ್ತಾರೆ. ನೀವು ಸಹನೆ ಕೈಗೊಂಡರೆ ಮತ್ತು ಭಯಭಕ್ತಿಯನ್ನು ಪಾಲಿಸಿದರೆ ಅವರ ಕುತಂತ್ರವು ನಿಮಗೆ ಯಾವ ಹಾನಿಯುಂಟು ಮಾಡಲಾರದು. ಖಂಡಿತವಾಗಿಯು ಅಲ್ಲಾಹನು ಅವರ ಕೃತ್ಯಗಳನ್ನು ಆವರಿಸುವವನಾಗಿದ್ದಾನೆ.
ಓ ಪೈಗಂಬರರೇ. ನೀವು ನುಸುಕಿನಲ್ಲೇ ತಮ್ಮ ಮನೆಯಿಂದ ಹೊರಟು ವಿಶ್ವಾಸಿಗಳನ್ನು ರಣರಂಗಕ್ಕಿಳಿಸಿ ಯುದ್ಧದ ಆಯಾಕಟ್ಟಿನಲ್ಲಿ ನಿಲ್ಲಿಸುತ್ತಿದ್ದಂತಹ ಸಂದರ್ಭವನ್ನು ಸ್ಮರಿಸಿರಿ. ಅಲ್ಲಾಹನು, ಆಲಿಸುವವನೂ, ಅರಿಯುವವನೂ ಆಗಿದ್ದಾನೆ.