ಎರಡು ಸೈನ್ಯಗಳು ಪರಸ್ಪರ ಎದುರುಗೊಂಡ ದಿನ ನಿಮಗೆ ಬಾಧಿಸಿದೆಲ್ಲವೂ ಅಲ್ಲಾಹನ ಅಪ್ಪಣೆಯಿಂದಾಗಿದೆ. ಇದೇಕೆಂದರೆ ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಪ್ರತ್ಯಕ್ಷವಾಗಿ ಅರಿತುಕೊಳ್ಳಲೆಂದಾಗಿದೆ.
ಮತ್ತು ಕಪಟವಿಶ್ವಾಸಿಗಳನ್ನು ಅರಿತುಕೊಳ್ಳಲೆಂದಾಗಿದೆ. 'ಬನ್ನಿರಿ, ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ ಅಥವಾ ಸತ್ಯನಿಷೇಧಿಗಳನ್ನು ದೂರಮಾಡಿರಿ' ಎಂದು ಅವರಿಗೆ ಹೇಳಲಾದರೆ ಅವರು ಹೇಳುತ್ತಾರೆ. ನಮಗೆ ಯುದ್ಧ ಮಾಡುವುದು ಗೊತ್ತಿರುತ್ತಿದ್ದರೆ ಖಂಡಿತ ನಾವು ನಿಮ್ಮ ಜೊತೆ ನಡೆಯುತ್ತಿದ್ದೆವು. ಅಂದು ಅವರು ಸತ್ಯವಿಶ್ವಾಸಕ್ಕಿಂತಲು ಹೆಚ್ಚಾಗಿ ಸತ್ಯನಿಷೇಧಕ್ಕೆ ನಿಕಟವಾಗಿದ್ದರು. ಅವರು ತಮ್ಮ ಮನಸ್ಸಿನಲ್ಲಿ ಇಲ್ಲದಿರುವುದನ್ನು ತಮ್ಮ ಬಾಯಿಯಿಂದ ಹೇಳುತ್ತಾರೆ. ಅವರು ಬಚ್ಚಿಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುತ್ತಾನೆ.
ಅವರು ಸ್ವತಃ (ಮನೆಗಳಲ್ಲಿ) ಕುಳಿತುಕೊಂಡು (ಯುದ್ಧಕ್ಕೆ ಹೋದ) ತಮ್ಮ ಸಹೋದರರ ಕುರಿತು 'ಅವರು ನಮ್ಮ ಮಾತು ಕೇಳಿರುತ್ತಿದ್ದರೆ ಕೊಲೆಗೀಡಾಗುತ್ತಿರಲಿಲ್ಲ' ಎಂದು ಹೇಳಿದವರಾಗಿದ್ದಾರೆ. ನೀವು ನಿಮ್ಮ ಮಾತಿನಲ್ಲಿ ಸತ್ಯಸಂಧರಾಗಿದ್ದರೆ ಸ್ವತಃ ನಿಮ್ಮಿಂದ ಮರಣವನ್ನು ತಡೆದು ಕೊಳ್ಳಿರಿ ಎಂದು ನೀವು ಹೇಳಿರಿ.
ಅಲ್ಲಾಹುವಿನ ಮಾರ್ಗದಲ್ಲಿ ಹುತಾತ್ಮರಾದವರನ್ನು ನೀವು ಎಂದೂ ಮೃತಪಟ್ಟರೆಂದು ಭಾವಿಸಬೇಡಿರಿ. ಏಕೆಂದರೆ ಅವರು ತಮ್ಮ ಪ್ರಭುವಿನ ಬಳಿ ಜೀವಂತವಾಗಿದ್ದಾರೆ. ಮತ್ತು ಅನ್ನಾಧಾರವನ್ನು ಪಡೆಯುತ್ತಿದ್ದಾರೆ.
ಅಲ್ಲಾಹನು ತನ್ನ ಅನುಗ್ರಹದಿಂದ ಅವರಿಗೆ ದಯಪಾಲಿಸಿರುವುದರಲ್ಲಿ ಸಂತುಷ್ಟರಾಗಿರುವರು ಮತ್ತು ತಮ್ಮೊಂದಿಗೆ ಇಲ್ಲಿಯ ವರೆಗೆ ಬಂದು ಸೇರದಿರುವ ತಮ್ಮ ಹಿಂದೆಯೇ (ಭೂಲೋಕದಲ್ಲಿ) ಇರುವ ವಿಶ್ವಾಸಿಗಳ ಕುರಿತು ಅವರಿಗೆ ಯಾವುದೇ ಭಯವಿಲ್ಲ ಹಾಗೂ ದುಃಖವಿಲ್ಲವೆಂದು ಅವರು (ಹುತಾತ್ಮರು) ಹರ್ಷ ಪ್ರಕಟಿಸುತ್ತಾರೆ.
ಅವರು ತಮಗೆ ಗಾಯವಾದ ಬಳಿಕವೂ ಅಲ್ಲಾಹ್ ಮತ್ತು ಸಂದೇಶವಾಹಕರ ಕರೆಗೆ ಓಗೊಟ್ಟವರಾಗಿದ್ದಾರೆ. ಅವರ ಪೈಕಿ ಯಾರು ಸತ್ಕರ್ಮಗೈಯ್ಯುತ್ತಾರೋ ಮತ್ತು ಭಯಭಕ್ತಿ ಪಾಲಿಸುತ್ತಾರೋ ಅವರಿಗೆ ಮಹಾಪ್ರತಿಫಲವಿದೆ.
ಸತ್ಯನಿಷೇಧಿಗಳು (ಖುರೈಷರು) ನಿಮ್ಮ ವಿರುದ್ಧ ಯುದ್ಧಕ್ಕಾಗಿ ಸಂಘಟಿತರಾಗಿದ್ದಾರೆ ನೀವು ಅವರನ್ನು ಭಯಪಡಿರಿ ಎಂದು ಜನರು ಸತ್ಯವಿಶ್ವಾಸಿಗಳಿಗೆ ಹೇಳಿದಾಗ ಈ ಮಾತು ಅವರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿತು ಮತ್ತು ನಮಗೆ ಅಲ್ಲಾಹನು ಸಾಕು. ಮತ್ತು ಅತ್ಯುತ್ತಮ ಕಾರ್ಯಸಾಧಕನು ಅವನೇ ಆಗಿದ್ದಾನೆಂದು ಅವರು ಹೇಳಿದರು.