ಅವರಲ್ಲಿ ಒಂದು ಗುಂಪು ಜನರು ಹೇಳಿದರು: “ನೀವೇಕೆ ಈ ಜನರಿಗೆ ಉಪದೇಶ ಮಾಡುತ್ತೀರಿ. ಅಲ್ಲಾಹು ಅವರನ್ನು ನಾಶ ಮಾಡುವನು ಅಥವಾ ಕಠಿಣವಾಗಿ ಶಿಕ್ಷಿಸುವನು.” ಅವರು ಹೇಳಿದರು: “ನಿಮ್ಮ ಪರಿಪಾಲಕನ (ಅಲ್ಲಾಹನ) ಮುಂದೆ ನಮ್ಮನ್ನು ದೋಷಮುಕ್ತಗೊಳಿಸುವುದಕ್ಕಾಗಿ ಮತ್ತು ಅವರು ದೇವಭಯವುಳ್ಳವರಾಗುವುದಕ್ಕಾಗಿ (ನಾವು ಹೀಗೆ ಮಾಡುತ್ತಿದ್ದೇವೆ).”[1]
[1] ಯಹೂದಿಗಳಲ್ಲಿದ್ದ ನೀತಿವಂತರಲ್ಲಿ ಕೆಲವರು ದುಷ್ಟರಿಗೆ ಬುದ್ಧಿವಾದ ಹೇಳಿದಾಗ, ಇತರರು ಹೇಳಿದರು: “ಅವರಿಗೆ ಬುದ್ಧಿವಾದ ಹೇಳಲು ಹೋಗಬೇಡಿ. ಅವರು ಹೇಗೂ ಅಲ್ಲಾಹನ ಶಿಕ್ಷೆಗೆ ಪಾತ್ರರಾಗುವವರು. ಅವರಿಗೆ ಉಪದೇಶ ಮಾಡುವುದು ವ್ಯರ್ಥ.” ಆದರೆ ಇದು ಸರಿಯಾದ ನಿಲುವಲ್ಲ. ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು ಸತ್ಯವಿಶ್ವಾಸಿಯ ಗುಣವಾಗಿದೆ.
ಅವರಿಗೆ ನೆನಪಿಸಿಕೊಡಲಾದ ವಿಷಯಗಳನ್ನು ಅವರು ಮರೆತು ಬಿಟ್ಟಾಗ, ಕೆಡುಕುಗಳನ್ನು ವಿರೋಧಿಸುತ್ತಿದ್ದ ಜನರನ್ನು ನಾವು ರಕ್ಷಿಸಿದೆವು. ಅಕ್ರಮವೆಸಗಿದ ಜನರನ್ನು ಅವರು ಅವಿಧೇಯತೆ ತೋರುತ್ತಿದ್ದ ಕಾರಣ ನಾವು ಕಠಿಣ ಶಿಕ್ಷೆಯ ಮೂಲಕ ಹಿಡಿದೆವು.
“ಪುನರುತ್ಥಾನ ದಿನದ ತನಕ ಅವರಿಗೆ (ಇಸ್ರಾಯೇಲ್ ಮಕ್ಕಳಿಗೆ) ಕಠೋರ ಹಿಂಸೆ ನೀಡುವ ಜನರನ್ನು ಅವರ ವಿರುದ್ಧ ಕಳುಹಿಸುವೆನು” ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ಘೋಷಿಸಿದ ಸಂದರ್ಭ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅತಿವೇಗವಾಗಿ ಶಿಕ್ಷೆ ನೀಡುತ್ತಾನೆ. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ನಾವು ಅವರನ್ನು ಭೂಮಿಯಲ್ಲಿ ಹಲವು ಗುಂಪುಗಳನ್ನಾಗಿ ವಿಂಗಡಿಸಿದೆವು. ಅವರಲ್ಲಿ ನೀತಿವಂತರಿದ್ದಾರೆ. ಅಲ್ಲದವರೂ ಇದ್ದಾರೆ. ನಾವು ಅವರನ್ನು ಒಳಿತು ಮತ್ತು ಕೆಡುಕುಗಳಿಂದ ಪರೀಕ್ಷಿಸಿದೆವು. ಅವರು (ವಿಧೇಯತೆಗೆ) ಮರಳುವುದಕ್ಕಾಗಿ.
ನಂತರ ಅವರ ಹಿಂದೆಯೇ ಅವರ ನಂತರದವರು ಬಂದರು. ಅವರು ಗ್ರಂಥದ ಉತ್ತರಾಧಿಕಾರವನ್ನು ವಹಿಸಿಕೊಂಡರು. ಅವರು ಇಹಲೋಕ ಜೀವನದ ಕೀಳು ವಸ್ತುಗಳನ್ನು ಪಡೆಯುತ್ತಾರೆ. ಅವರು ಹೇಳುತ್ತಾರೆ: “ನಮ್ಮನ್ನು ಕ್ಷಮಿಸಲಾಗುತ್ತದೆ.”[1] ಅದರಂತಹ ಬೇರೆ ವಸ್ತುಗಳು ದೊರಕಿದರೂ ಅವರು ಅದನ್ನು ಪಡೆಯುತ್ತಾರೆ. ಅಲ್ಲಾಹನ ಮೇಲೆ ಸತ್ಯವಲ್ಲದೆ ಬೇರೇನೂ ಹೇಳುವುದಿಲ್ಲ ಮತ್ತು ಗ್ರಂಥವನ್ನು ಅಧ್ಯಯನ ಮಾಡಿ (ಅದರಂತೆ ನಡೆಯುತ್ತೇವೆ) ಎಂದು ಅವರಿಂದ ಗ್ರಂಥದ ಮೂಲಕ ಕರಾರು ಪಡೆಯಲಾಗಿಲ್ಲವೇ? ದೇವಭಯವುಳ್ಳವರಿಗೆ ಪರಲೋಕ ಜೀವನವೇ ಉತ್ತಮ. ನೀವು ಅರ್ಥಮಾಡಿಕೊಳ್ಳುವುದಿಲ್ಲವೇ?
[1] ಯಹೂದಿಗಳು ಸ್ವಯಂ ಅವರನ್ನು ದೇವರ ಮಕ್ಕಳು ಮತ್ತು ಶ್ರೇಷ್ಠ ಜನರೆಂದು ನಂಬುತ್ತಾರೆ. ಆದ್ದರಿಂದ ಅವರು ಏನೇ ತಪ್ಪು ಮಾಡಿದರೂ ಅಲ್ಲಾಹು ಅವರನ್ನು ಕ್ಷಮಿಸುತ್ತಾನೆಂಬ ಭಾವನೆ ಅವರಲ್ಲಿದೆ.