ಭೂಮಿಯಲ್ಲಿ ಚಲಿಸುತ್ತಿರುವ ಪ್ರತಿಯೊಂದು ಜೀವಿಯ ಜೀವನಾಧಾರವು ಅಲ್ಲಾಹನ ಹೊಣೆಯಲ್ಲಿದೆ ಮತ್ತು ಅವನು ಅವುಗಳ ಇಹದ ತಾತ್ಕಾಲಿಕ ಮತ್ತು ಪರದ ತಂಗುದಾಣವನ್ನು ಅರಿಯುತ್ತಾನೆ. ಸಕಲವೂ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಿಸಲ್ಪಟ್ಟಿವೆ.
ಅವನೇ ಆಕಾಶಗಳನ್ನು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದನು. ಅವನ ಸಿಂಹಾಸನವು ಜಲದ ಮೇಲಿತ್ತು, ಇದು ನಿಮ್ಮ ಪೈಕಿ ಅತ್ಯುತ್ತಮ ಕರ್ಮಗಳನ್ನು ಎಸಗುವವರು ಯಾರೆಂದು ನಿಮ್ಮನ್ನು ಪರೀಕ್ಷಿಸಲಿಕ್ಕಾಗಿದೆ, ನೀವು ಮರಣಾನಂತರ ಎಬ್ಬಿಸಲ್ಪಡುವಿರೆಂದು ಅವರೊಡನೆ ಹೇಳಿದರೆ ಖಂಡಿತವಾಗಿಯೂ ಇದು ಸ್ಪಷ್ಟ ಜಾದುವೇ ಆಗಿದೆ ಎಂದು ಸತ್ಯನಿಷೇಧಿಗಳು ಹೇಳುತ್ತಾರೆ.
ಒಂದು ನಿಶ್ಚಿತ ಅವಧಿಯವರೆಗೆ ಅವರಿಂದ ಯಾತನೆಯನ್ನು ನಾವು ತಡೆದು ಇರಿಸಿದಾಗ ಪರಿಹಾಸ್ಯವಾಗಿ ಯಾವ ವಸ್ತುವೂ ಅದನ್ನು ತಡೆ ಹಿಡಿಯಿತು ? ಎಂದು ಸತ್ಯನಿಷೇಧಿಗಳು ಕೇಳುತ್ತಾರೆ. ಜಾಗ್ರತೆ! ಅದು ಬಂದೆರಗುವ ದಿನದಂದು, ಯಾರಿಂದಲೂ ಅದನ್ನು ಸರಿಸಲಾಗದು, ಮತ್ತು ಅವರು ಪರಿಹಾಸ್ಯ ಮಾಡುತ್ತಿದ್ದ ವಸ್ತುವೇ ಅವರನ್ನು ಆವರಿಸಿಕೊಳ್ಳುವುದು.
ಮತ್ತು ಅವನಿಗೆ ಬಾಧಿಸಿದ ಸಂಕಷ್ಟದ ನಂತರ ನಾವು ಅವನಿಗೆ ಯಾವುದಾದರೂ ಸುಖಾನುಗ್ರಹದ ಸವಿಯನ್ನುಣಿಸಿದರೆ ನನ್ನಿಂದ ಕೆಡುಕುಗಳು ತೊಲಗಿದವು ಎಂದು ಅವನು ಹೇಳತೊಡಗುತ್ತಾನೆ. ನಿಜವಾಗಿಯೂ ಅವನು ಹರ್ಷಿತನೂ, ಅಹಂಕಾರಿಯೂ ಆಗಿಬಿಡುತ್ತಾನೆ.
ಈ ವ್ಯಕ್ತಿಯ (ಪೈಗಂಬರ್) ಮೇಲೆ ನಿಧಿಯೊಂದು ಏಕೆ ಇಳಿಸಲಾಗಿಲ್ಲ ? ಅಥವ ಅವನ ಜೊತೆ ದೇವಚರನೋರ್ವನು ಏಕೆ ಬರಲಿಲ್ಲ? ಎಂದು ನಿಮ್ಮ ಬಗ್ಗೆ ಅವರಾಡುವ ಮಾತುಗಳಿಂದಾಗಿ ನಿಮ್ಮೆಡೆಗೆ ಅವತೀರ್ಣವಾಗುತ್ತಿರುವುದರಲ್ಲಿ ಕೆಲವೊಂದು ಭಾಗವನ್ನು ನೀವು ತೊರೆದು ಬಿಡಬಹುದು. ಮತ್ತು ನಿಮ್ಮ ಮನಸ್ಸು ಸಂಕುಚಿತಗೊಳ್ಳಬಹುದು. ನೀವಂತೂ ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವರಾಗಿದ್ದೀರಿ ಮತ್ತು ಅಲ್ಲಾಹನು ಸಕಲ ವಸ್ತುಗಳ ಮೇಲ್ವಿಚಾರಕನಾಗಿರುವನು.