ಸ್ವಾಲಿಹ್ ಉತ್ತರಿಸಿದರು; ಓ ನನ್ನ ಜನಾಂಗದವರೇ, ನೀವು ಯೋಚಿಸಿದ್ದೀರಾ ನಾನು ನನ್ನ ಪ್ರಭುವಿನ ಕಡೆಯಿಂದ ಒಂದು ಸದೃಢ ಪ್ರಮಾಣದಲ್ಲಿದ್ದು ಹಾಗೂ ಅವನು ನನಗೆ ತನ್ನ ಕಡೆಯ ಕಾರುಣ್ಯವನ್ನು ನೀಡಿದ್ದಾನೆ, ಆ ಬಳಿಕ ನಾನು ಅಲ್ಲಾಹನನ್ನು ಧಿಕ್ಕರಿಸಿದರೆ ನನಗೆ ಅವನ ಹೊರತು ಸಹಾಯ ಮಾಡುವವನಾರಿದ್ದಾನೆ ? ನೀವು ನನ್ನ £ಷ್ಟ್ಟವಲ್ಲದೆ ಇನ್ನೇನನ್ನು ಹೆಚ್ಚಿಸುತ್ತಿಲ್ಲ.
ಓ ನನ್ನ ಜನಾಂಗದವರೇ ಇದೋ ಅಲ್ಲಾಹನ ಈ ಒಂಟೆಯು ನಿಮಗೊಂದು ದೃಷ್ಟಾಂತವಾಗಿದೆ. ಇನ್ನು ನೀವು ಅದನ್ನು ಅಲ್ಲಾಹನ ಭೂಮಿಯಲ್ಲಿ ಸ್ವತಂತ್ರವಾಗಿ ಮೇಯಲು ಬಿಡಿರಿ, ಮತ್ತು ಅದಕ್ಕೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡಬೇಡಿರಿ. ಹಾಗೇನಾದರೂ ಆದರೆ ಅತಿ ಶೀಘ್ರ ಯಾತನೆಯು ನಿಮ್ಮನ್ನು ಹಿಡಿದುಕೊಳ್ಳುವುದು.
ಹಾಗಿದ್ದೂ ಅವರು ಆ ಒಂಟೆಯ ಕಾಲಿನ ಸ್ನಾಯುಗಳನ್ನು ಕತ್ತರಿಸಿಬಿಟ್ಟರು ಆಗ ಸ್ವಾಲಿಹ್ ಹೇಳಿದರು; ಇನ್ನು ನೀವು ನಿಮ್ಮ ಮನೆಗಳಲ್ಲಿ ಕೇವಲ ಮೂರು ದಿನಗಳವರೆಗೆ ಸುಖಭೋಗಗಳನ್ನು ಸವಿಯಿರಿ. ಇದು ಸುಳ್ಳಾಗದಂತಹ ವಾಗ್ದಾನವಾಗಿದೆ.
ಕೊನೆಗೆ ನಮ್ಮ ಯಾತನೆಯು ಬಂದಾಗ ನಾವು ಸ್ವಾಲಿಹ್ರವರನ್ನೂ ಅವರ ಮೇಲೆ ವಿಶ್ವಾಸವಿರಿಸಿದವರನ್ನೂ ನಮ್ಮ ಕೃಪೆಯಿಂದ ರಕ್ಷಿಸಿದೆವು ಮತ್ತು ಆ ದಿನದ ಅಪಮಾನದಿಂದ ಅವರನ್ನು ಕಾಪಾಡಿದೆವು. ನಿಜವಾಗಿಯೂ ನಿಮ್ಮ ಪ್ರಭು ಅತ್ಯಂತ ಬಲಿಷ್ಠನೂ, ಪ್ರಚಂಡನೂ ಆಗಿದ್ದಾನೆ,
ನಮ್ಮ ಮಲಕಗಳು ಇಬ್ರಾಹೀಮ್ರವರ ಬಳಿಗೆ ಒಬ್ಬ ಪುತ್ರನ ಶುಭವಾರ್ತೆಯೊಂದಿಗೆ ಬಂದರು ಮತ್ತು 'ಸಲಾಂ' ಹೇಳಿದರು. ಅವರು ಸಹ 'ಸಲಾಂ' ಎಂದು ಉತ್ತರಿಸಿದರು. ಮತ್ತು ತಡಮಾಡದೆ ಹುರಿದ ಕರುವೊಂದನ್ನು ತಂದರು.
ಆದರೆ ಅವರ ಕೈಗಳು ಆಹಾರವನ್ನು ಮುಟ್ಟದಿರುವುದನ್ನು ಕಂಡಾಗ ಅವರ ಬಗ್ಗೆ ಅಪರಿಚಿತತೆಯು ಭಾಸವಾಗಿ ಒಳಗೊಳಗೆ ಅವರ ಕುರಿತು ಭಯಪಡಲಾರಂಭಿಸಿದರು. ಅವರೆಂದರು; ಭಯಪಡಬೇಡಿರಿ ನಾವು ಲೂತರ ಜನಾಂಗದೆಡೆಗೆ ಕಳುಹಿಸಲ್ಪಟ್ಟಿದ್ದೇವೆ.