ಅವರು ಭೂಮಿಯಲ್ಲಿ ಅಲ್ಲಾಹನನ್ನು ಸೋಲಿಸಲಾರರು ಮತ್ತು ಅಲ್ಲಾಹನ ಹೊರತು ಅವರಿಗೆ ರಕ್ಷಕ ಮಿತ್ರರೂ ಇರಲಾರರು. ಅವರಿಗೆ ಶಿಕ್ಷೆಯು ಇಮ್ಮಡಿಗೊಳಿಸಲಾಗುವುದು ಅವರು ಸತ್ಯವನ್ನು ಕೇಳುವ ಮತ್ತು ನೋಡುವ ಸಾಮರ್ಥ್ಯವನ್ನು ಹೊಂದಿರಲಿಲ್ಲ.
ಸತ್ಯವಿಶ್ವಾಸಿ ಹಾಗೂ ಸತ್ಯನಿಷೇಧಿ ಎರಡು ಬಣಗಳ ಉಪಮೆಯು ಅಂಧನೂ, ಕಿವುಡನೂ ಆದ ಒಬ್ಬನಂತಿದೆ ಮತ್ತು ನೋಡುವವನೂ ಕೇಳುವವನೂ ಆದ ಇನ್ನೊಬ್ಬನಂತಿದೆ. ಈ ಉಪಮೆಯಲ್ಲಿ ಇಬ್ಬರೂ ಸರಿಸಮಾನರೇ? ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ ?
ನಿಶ್ಚಯವಾಗಿಯೂ ನಾವು ನೂಹ್ರವರನ್ನು ಅವರ ಜನಾಂಗದೆಡೆಗೆ ಸಂದೇಶವಾಹಕರಾಗಿ ಕಳುಹಿಸಿದೆವು. ನೂಹ್ರವರು ಹೇಳಿದರು: ನಿಶ್ಚಯವಾಗಿಯೂ ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
ಆಗ ಅವರ ಜನಾಂಗದ ಸತ್ಯನಿಷೇಧಿಗಳಾದ ಮುಖಂಡರು ಉತ್ತರಿಸಿದರು : ನಾವಂತೂ ನಿಮ್ಮನ್ನು ನಮ್ಮಂತಿರುವ ಒಬ್ಬ ಮನುಷ್ಯನಾಗಿಯೇ ಕಾಣುತ್ತೇವೆ ಮತ್ತು ನಮ್ಮ ಜನಾಂಗದ ಕೀಳು ವರ್ಗದವರು ಮುಂದಾಲೋಚನೆಯಿಲ್ಲದೆ ನಿಮ್ಮನ್ನು ಅನುಸರಿಸುತ್ತಿರುವುದಾಗಿ ನಾವು ಕಾಣುತ್ತೇವೆ. ನಾವು ನಿಮ್ಮಲ್ಲಿ ನಮಗಿಂತ ಮಿಗಿಲಾದ ಯಾವ ಶ್ರೇಷ್ಟತೆಯನ್ನು ಕಾಣುತ್ತಿಲ್ಲ. ಮಾತ್ರವಲ್ಲ ನಾವು ನಿಮ್ಮನ್ನು ಸುಳ್ಳುಗಾರರೆಂದು ಭಾವಿಸುತ್ತೇವೆ.
ನೂಹ್ರವರು ಹೇಳಿದರು : ಓ ನನ್ನ ಜನಾಂಗದವರೇ ಸ್ವಲ್ಪ ಯೋಚಿಸಿರಿ ನಾನು ನನ್ನ ಪ್ರಭುವಿನ ಕಡೆಯಿಂದ ಒಂದು ಸ್ಪಷ್ಟ ಆಧಾರ ಪ್ರಮಾಣವನ್ನು ಹೊಂದಿದ್ದು ಮತ್ತು ಅವನು ತನ್ನ ಬಳಿಯ ಕೃಪೆಯನ್ನು(ಪ್ರವಾದಿತ್ವ) ನೀಡಿರುವನು. ಅದು ನಿಮಗೆ ಪರೋಕ್ಷವಾಗಿದೆ. ನೀವು ಅದನ್ನು ಇಷ್ಟಪಡದಿದ್ದರೂ ನಾನದನ್ನು ನಿಮ್ಮ ಮೇಲೆ ಬಲವಂತವಾಗಿ ಹೇರಿಬಿಡುತ್ತೇನೆಯೇ ?