ಯಾರಿಗೆ ಅಲ್ಲಾಹನು ಸನ್ಮಾರ್ಗದಲ್ಲಿ ಮುನ್ನಡೆಸುತ್ತನೋ ಅವನೇ ಸನ್ಮಾರ್ಗ ಪಡೆಯುತ್ತಾನೆ. ಮತ್ತು ಅವನು ಯಾರನ್ನು ದಾರಿಗೆಡಿಸುತ್ತಾನೋ ಇಂತಹವರಿಗೆ ಖಂಡಿತವಾಗಿಯೂ ನೀವು ಅಲ್ಲಾಹನ ಹೊರತು ಅವನ ಸಹಾಯಕ ಮಿತ್ರನಾಗಿ ಇನ್ನಾರನ್ನು ಪಡೆಯಲಾರಿರಿ. ಅಂತಹವರನ್ನು ನಾವು ಪ್ರಳಯ ದಿನದಂದು ಕುರುಡರು, ಮೂಗರು, ಕಿವುಡರನ್ನಾಗಿ ಮಾಡಿ ಅಧೋಮುಕಿಗಳನ್ನಾಗಿ ಒಟ್ಟು ಸೇರಿಸುವೆವು. ಅವರ ನೆಲೆಯು ನರಕವಾಗಿರುವುದು. ಅದರ ಅಗ್ನಿಯು ಮಂದವಾದಾಗಲೆಲ್ಲಾ ನಾವು ಅವರ ಮೇಲೆ ಅದನ್ನು ಭುಗಿಲೆಬ್ಬಿಸುತ್ತಿರುವೆವು.
ಇದು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದಕ್ಕಾಗಿ ಮತ್ತು ನಾವು ಎಲುಬುಗಳಾಗಿ, ಚೂರು ಚೂರಾದ ಬಳಿಕವೂ ಹೊಸ ಸೃಷ್ಟಿಯಲ್ಲಿ ಎಬ್ಬಿಸಲ್ಪಡುತ್ತೇವೆಯೇ? ಎಂದು ಅವರು ಹೇಳುತ್ತಿದ್ದುದರ ಪ್ರತಿಫಲವಾಗಿದೆ.
ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ ಅಲ್ಲಾಹನು ಖಂಡಿತವಾಗಿಯೂ ಅವರಂತಿರುವವರನ್ನು ಸೃಷ್ಟಿಸಲು ಶಕ್ತನಾಗಿದ್ದಾನೆಂದು ಅವರು ನೋಡುವುದಿಲ್ಲವೇ? ಮತ್ತು ಅವನು ಅವರಿಗೆ ಒಂದು ಕಾಲಾವಧಿಯನ್ನು ನಿಶ್ಚಯಿಸಿದನು: ಅದರಲ್ಲಿ ಸಂಶಯವಿಲ್ಲ. ಆದರೆ ಅಕ್ರಮಿಗಳು ನಿಷೇಧವನ್ನು ತಾಳದೇ ಇರುವುದಿಲ್ಲ.
ಓ ಪೈಗಂಬರರೇ ಹೇಳಿರಿ: ನೀವು ನನ್ನ ಪ್ರಭುವಿನ ಕಾರುಣ್ಯದ ಭಂಡಾರಗಳ ಒಡೆಯರಾಗಿರುತ್ತಿದ್ದರೂ ಅದು ಖರ್ಚಾಗಿಬಿಡುವ ಭಯದಿಂದ ನೀವದನ್ನು ತಡೆದಿರಿಸಿಕೊಳ್ಳುತ್ತಿದ್ದಿರಿ ಮತ್ತು ಮನುಷ್ಯನು ಬಲು ಜಿಪುಣನೇ ಆಗಿದ್ದಾನೆ.
(ಓ ಪೈಗಂಬರರೇ) ನಾವು ಮೂಸಾರವರಿಗೆ ಸುಸ್ಪಷ್ಟವಾದ ಒಂಬತ್ತು ದೃಷ್ಟಾಂತಗಳನ್ನು ದಯಪಾಲಿಸಿದೆವು. ಇನ್ನು ನೀವು ಇಸ್ರಾಯೀಲ್ ಸಂತತಿಗಳೊAದಿಗೆ ಕೇಳಿರಿ: ಅವರು (ಮೂಸಾರವರು) ಅವರೆಡೆಗೆ ಬಂದಾಗ ಫಿರ್ಔನ್ ಹೇಳಿದನು: ಓ ಮೂಸಾ, ಖಂಡಿತವಾಗಿಯು ನೀನೊಬ್ಬ ಮಾಟಬಾಧಿತನೆಂದು ನಾನು ಭಾವಿಸುತ್ತೇನೆ.
ಮೂಸಾ ಉತ್ತರಿಸಿದರು: ಈ ದೃಷ್ಟಾಂತಗಳನ್ನು(ಸತ್ಯವನ್ನು) ನಿನಗೆ ಮನವರಿಕೆ ಮಾಡಿಕೊಡಲು ಆಕಾಶಗಳ ಮತ್ತು ಭೂಮಿಯ ಪ್ರಭುವೇ ಇಳಿಸಿಕೊಟ್ಟಿರುವನೆಂದು ನಿನಗೆ ಚೆನ್ನಾಗಿ ತಿಳಿದಿದೆ. ಓ ಫಿರ್ಔನ್ ನಿಶ್ಚಯವಾಗಿಯೂ ನೀನು ನಾಶಕ್ಕೊಳಗಾಗಿರುವೆ ಎಂದು ನಾನು ಭಾವಿಸುತ್ತೇನೆ.
ಅವನ ನಾಶದ ನಂತರ ನಾವು ಇಸ್ರಾಯೀಲ್ ಸಂತತಿಗಳಿಗೆ ಹೇಳಿದೆವು: ನೀವು ಈ ಭೂಪ್ರದೇಶದಲ್ಲಿ (ಫಲಸ್ತೀನ್) ವಾಸಿಸಿರಿ. ಇನ್ನು ಪರಲೋಕದ ವಾಗ್ದಾನವು ಬಂದುಬಿಟ್ಟರೆ ನಾವು ನಿಮ್ಮನ್ನು ಒಟ್ಟುಗೂಡಿಸಿ ತರುವೆವು.