[1] ಕಪಟವಿಶ್ವಾಸಿಗಳಲ್ಲಿ ಕೆಲವರು ಹೇಳುತ್ತಿದ್ದರು: “ನಮಗೆ ಎರಡು ಹೃದಯಗಳಿವೆ. ಒಂದು ಹೃದಯದಲ್ಲಿ ಮುಸಲ್ಮಾನರ ಬಗ್ಗೆ ಪ್ರೀತಿಯಿದೆ ಮತ್ತು ಇನ್ನೊಂದು ಹೃದಯದಲ್ಲಿ ಸತ್ಯನಿಷೇಧಿಗಳ ಬಗ್ಗೆ ಪ್ರೀತಿಯಿದೆ.” ಆದರೆ ಅಲ್ಲಾಹು ಇದನ್ನು ನಿರಾಕರಿಸಿ, ಮನುಷ್ಯನಿಗೆ ಇರುವುದು ಒಂದೇ ಹೃದಯ. ಆ ಹೃದಯದಲ್ಲಿ ಅಲ್ಲಾಹನಲ್ಲಿರುವ ಪ್ರೀತಿ ಮತ್ತು ಅಲ್ಲಾಹನ ವೈರಿಗಳಲ್ಲಿರುವ ಪ್ರೀತಿ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾನೆ. [2] ಝಿಹಾರ್ ಎಂದರೆ ಹೆಂಡತಿಯನ್ನು “ನೀನು ನನಗೆ ನನ್ನ ತಾಯಿ ಸಮಾನ” ಎಂದು ಹೇಳಿ ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನು ಕಡಿದುಕೊಳ್ಳುವುದು. ಆದರೆ ಇದು ವಿಚ್ಛೇದನವಲ್ಲ. ಆದ್ದರಿಂದ ಹೆಂಡತಿಗೆ ಅತ್ತ ಗಂಡನೊಂದಿಗೆ ಬದುಕಲೂ ಆಗದೆ ಇತ್ತ ಬೇರೊಬ್ಬನನ್ನು ವಿವಾಹವಾಗಲೂ ಆಗದೆ ಅಡಕತ್ತರಿಯಲ್ಲಿ ಸಿಲುಕಿದ ಪರಿಸ್ಥಿತಿಯನ್ನು ಅನುಭವಿಸಬೇಕಾಗಿ ಬರುತ್ತಿತ್ತು. ಇಸ್ಲಾಮಿ ಪೂರ್ವ ಕಾಲದಲ್ಲಿ ವ್ಯಾಪಕವಾಗಿದ್ದ ಇಂತಹ ಅನೇಕ ಮಹಿಳಾ ವಿರೋಧಿ ಸಂಪ್ರದಾಯಗಳನ್ನು ಇಸ್ಲಾಂ ಕೊನೆಗೊಳಿಸಿತು. [3] ಮಕ್ಕಳನ್ನು ದತ್ತು ಪಡೆಯುವುದನ್ನು ಇಸ್ಲಾಂ ವಿರೋಧಿಸುವುದಿಲ್ಲ. ಆದರೆ ದತ್ತು ಪಡೆದ ಮಕ್ಕಳು ದತ್ತು ಪುತ್ರರಾಗಿರುತ್ತಾರೆಯೇ ವಿನಾ ದತ್ತು ಪಡೆದವನ ಸ್ವಂತ ಮಕ್ಕಳ ಸ್ಥಾನಮಾನಕ್ಕೇರುವುದಿಲ್ಲ. ದತ್ತು ಪಡೆದ ವ್ಯಕ್ತಿ ಕೇವಲ ಸಂರಕ್ಷಕನಾಗುತ್ತಾನೆಯೇ ಹೊರತು ನೈಜ ತಂದೆಯಾಗುವುದಿಲ್ಲ.
[1] ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಸತ್ಯವಿಶ್ವಾಸಿಗಳ ಹಿತಚಿಂತಕರಾಗಿದ್ದಾರೆ. ಸತ್ಯವಿಶ್ವಾಸಿಗಳು ಅಭ್ಯುದಯ ಹೊಂದಬೇಕು ಮತ್ತು ಸ್ವರ್ಗ ಪ್ರವೇಶ ಮಾಡಬೇಕು ಎಂಬುದೇ ಅವರ ಪರಮೋಚ್ಛ ಗುರಿಯಾಗಿದೆ. ಅದಕ್ಕಾಗಿ ಅವರು ಆಹೋರಾತ್ರಿ ನಿರಂತರ ಪರಿಶ್ರಮಿಸುತ್ತಾರೆ. ಆದ್ದರಿಂದ ಸತ್ಯವಿಶ್ವಾಸಿಗಳು ಕೂಡ ಅವರನ್ನು ಅತಿಯಾಗಿ ಪ್ರೀತಿಸಬೇಕು. ಅವರಿಗಾಗಿ ಯಾವುದೇ ತ್ಯಾಗವನ್ನು ಮಾಡಲು ಸಿದ್ಧರಾಗಬೇಕು. ಇತರೆಲ್ಲರಿಗಿಂತ ಹೆಚ್ಚು ಅವರನ್ನು ಪ್ರೀತಿಸಬೇಕು. ಅವರ ಆಜ್ಞೆಗಳನ್ನು ಪಾಲಿಸುವುದರಲ್ಲಿ ಸ್ವಲ್ಪವೂ ಹಿಂಜರಿಯಬಾರದು. [2] ಅಂದರೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಂತರ ಅವರ ಪತ್ನಿಯರನ್ನು ವಿವಾಹವಾಗುವ ಅನುಮತಿ ಯಾರಿಗೂ ಇಲ್ಲ. ಏಕೆಂದರೆ, ಅವರು ಗೌರವಾನ್ವಿತ ಸ್ಥಾನದಲ್ಲಿರುವವರು. ಅವರು ಸತ್ಯವಿಶ್ವಾಸಿ ಪುರುಷರಿಗೂ, ಮಹಿಳೆಯರಿಗೂ ತಾಯಂದಿರಾಗಿದ್ದಾರೆ. [3] ಮುಹಾಜಿರರು (ಮಕ್ಕಾದಿಂದ ಹಿಜ್ರ ಮಾಡಿದ ಮುಸ್ಲಿಮರು) ಮದೀನಕ್ಕೆ ವಲಸೆ ಬಂದ ಆರಂಭಕಾಲದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ಮುಹಾಜಿರ್ ಮತ್ತು ಒಬ್ಬ ಅನ್ಸಾರ್ (ಮದೀನ ನಿವಾಸಿ ಮುಸ್ಲಿಂ) ನಡುವೆ ವಿಶೇಷ ಸಾಹೋದರತೆಯನ್ನು ಸ್ಥಾಪಿಸಿದ್ದರು. ಅನ್ಸಾರರು ತಮ್ಮ ಆಸ್ತಿಯಲ್ಲಿ ಮುಹಾಜಿರರಿಗೆ ಹಕ್ಕನ್ನು ನೀಡುತ್ತಿದ್ದರು. ಆದರೆ ವಾರಸು ನಿಯಮಗಳನ್ನು ವಿವರಿಸುವ ವಚನಗಳು ಅವತೀರ್ಣವಾದ ನಂತರ ವಾರೀಸು ಹಕ್ಕನ್ನು ಕೇವಲ ಸಂಬಂಧಿಕರಿಗೆ ಮಾತ್ರ ಸೀಮಿತಗೊಳಿಸಲಾಯಿತು.