[1] ಯಹೂದಿಗಳು ಅಲ್ಲಾಹನ ಗ್ರಂಥವನ್ನು ಮತ್ತು ಕರಾರುಗಳನ್ನು ಲೆಕ್ಕಿಸದೆ ಶೈತಾನರ ಹಿಂದೆ ಬಿದ್ದರು. ಅವರು ಶೈತಾನರಿಂದ ಮಾಟಗಾರಿಕೆಯನ್ನು ಕಲಿತದ್ದು ಮಾತ್ರವಲ್ಲದೆ ಪ್ರವಾದಿ ಸುಲೈಮಾನ್ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿಯಲ್ಲ, ಬದಲಿಗೆ ಅವರೊಬ್ಬ ಮಾಟಗಾರನೆಂದು ಪ್ರಚಾರ ಮಾಡತೊಡಗಿದರು. ಆದರೆ ಪ್ರವಾದಿ ಸುಲೈಮಾನ್ (ಅವರ ಮೇಲೆ ಶಾಂತಿಯಿರಲಿ) ಮಾಟಗಾರಿಕೆ ಮಾಡುತ್ತಿರಲಿಲ್ಲ. ಏಕೆಂದರೆ ಮಾಟಗಾರಿಕೆ ಮಾಡುವುದು ಸತ್ಯನಿಷೇಧವಾಗಿದೆ. ಒಬ್ಬ ಪ್ರವಾದಿ ಸತ್ಯನಿಷೇಧವನ್ನು ಹೇಗೆ ತಾನೇ ಮಾಡಲು ಸಾಧ್ಯ ಎಂದು ಅಲ್ಲಾಹು ಇಲ್ಲಿ ಸ್ಪಷ್ಟಪಡಿಸುತ್ತಾನೆ. ಇನ್ನೊಂದು ವರದಿಯ ಪ್ರಕಾರ ಸುಲೈಮಾನರ ಕಾಲದಲ್ಲಿ ಮಾಟಗಾರಿಕೆಯು ವ್ಯಾಪಕವಾಗಿ ಹರಡಿಕೊಂಡಿತ್ತು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸುಲೈಮಾನರು ಮಾಟಗಾರಿಕೆಯನ್ನು ಕಲಿಸುವ ಎಲ್ಲಾ ಪುಸ್ತಕಗಳನ್ನು ವಶಪಡಿಸಿಕೊಂಡು ತನ್ನ ಸಿಂಹಾಸನದ ಅಡಿಯಲ್ಲಿ ದಫನ ಮಾಡಿದರು. ಅವರ ಮರಣಾನಂತರ ಶೈತಾನರು ಮಾಟಗಾರರೊಂದಿಗೆ ಸೇರಿಕೊಂಡು ಆ ಪುಸ್ತಕಗಳನ್ನು ಹೊರತೆಗೆದರು. ಅವುಗಳನ್ನು ಜನರಿಗೆ ತೋರಿಸಿ ಸುಲೈಮಾನರು ಆಡಳಿತ ಮಾಡುತ್ತಿದ್ದದ್ದು ಈ ಮಾಟಗಾರಿಕೆಯ ಆಧಾರದಲ್ಲಾಗಿತ್ತು ಎಂದು ಹೇಳಿದರು. ಇದನ್ನು ಕಂಡು ಅತಿರೇಕಿಗಳಾದ ಕೆಲವರು ಸುಲೈಮಾನರನ್ನು (ಅವರ ಮೇಲೆ ಶಾಂತಿಯಿರಲಿ) ಸತ್ಯನಿಷೇಧಿ ಎಂದು ಜರೆದರು.
[1] ರಾಇನಾ ಎಂದರೆ ನಮ್ಮ ಕಡೆಗೆ ಗಮನಹರಿಸಿ ಎಂದರ್ಥ. ಶಿಷ್ಯರಿಗೆ ಮಾತು ಅರ್ಥವಾಗದಿದ್ದರೆ ಈ ಪದವನ್ನು ಹೇಳಿ ಅವರು ಗುರುವಿನ ಗಮನ ಸೆಳೆಯುತ್ತಿದ್ದರು. ಆದರೆ ಯಹೂದಿಗಳು ಈ ಪದವನ್ನು ದ್ವಂದ್ವಾರ್ಥದಲ್ಲಿ ಬಳಸುತ್ತಿದ್ದರು. ಕೆಲವೊಮ್ಮೆ ಅವರು ನಮ್ಮ ಕುರಿಗಳನ್ನು ಕಾಯುವವನು ಎಂಬ ಅರ್ಥದಲ್ಲಿ "ರಾಈನಾ" ಎಂದು ಹೇಳುತ್ತಿದ್ದರು. ಕೆಲವೊಮ್ಮೆ ಅವಿವೇಕಿ ಎಂಬರ್ಥದಲ್ಲಿ "ರಾಇನಾ" ಎಂಬ ಪದವನ್ನು ಬಳಸುತ್ತಿದ್ದರು. ಆದ್ದರಿಂದ ಅಲ್ಲಾಹು ಅದರ ಬದಲಿಗೆ "ಉನ್ಝುರ್ನಾ" ಎಂಬ ಪದವನ್ನು ಬಳಸಲು ಆದೇಶಿಸಿದನು. ಉನ್ಝುರ್ನಾ ಎಂದರೆ ನಮ್ಮ ಕಡೆಗೆ ಗಮನ ನೀಡಿರಿ ಎಂದರ್ಥ.