ಹೇಳಲಾಯಿತು: ಓ ಮೂಸಾ, ನಾನು ನನ್ನ ಪೈಗಂಬರರ ಮತ್ತು ನನ್ನೊಡನೆಯ ಸಂಭಾಷಣೆಯಿAದ ಇತರ ಜನರ ಪೈಕಿ ನಿಮ್ಮನ್ನು ಆರಿಸಿರುವೆನು. ಆದ್ದರಿಂದ ನಾನು ನಿಮಗೆ ನೀಡಿರುವುದನ್ನು ಸ್ವೀಕರಿಸಿರಿ ಮತ್ತು ಕೃತಜ್ಞತೆ ತೋರಿಸಿರಿ.
ಮತ್ತು ನಾವು ಸರ್ವ ವಿಧದ ಉಪದೇಶ ಹಾಗೂ ಸಕಲ ವಿಷಯಗಳ ವಿವರಣೆಯನ್ನು ಅವರಿಗೆ ಫಲಕಗಳ ಮೇಲೆ ಬರೆದು ಕೊಟ್ಟೆವು. ನೀವು ಇದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ ಮತ್ತು ಅದರಲ್ಲಿರುವ ಉತ್ತಮ ಕಾರ್ಯಗಳನ್ನು ಅನುಸರಿಸಲು ನಿಮ್ಮ ಜನರಿಗೆ ಆದೇಶಿಸಿರಿ. ಇನ್ನು ಶೀಘ್ರವೇ ಧಿಕ್ಕಾರಿಗಳ ವಾಸಸ್ಥಳವನ್ನು ನಾನು ನಿಮಗೆ ತೋರಿಸಿಕೊಡಲಿರುವೆನು.
ಇಹಲೋಕದಲ್ಲಿ ಅನ್ಯಾಯವಾಗಿ ಅಹಂಕಾರ ತೋರುವವರನ್ನು ನಾನು ನನ್ನ ಆದೇಶಗಳಿಂದ ದೂರಸರಿಸಿರುವೆನು ಮತ್ತು ಅವರು ಸಕಲ ದೃಷ್ಟಾಂತವನ್ನು ಕಂಡರೂ ಅದರಲ್ಲಿ ವಿಶ್ವಾಸವಿಡಲಾರರು ಮತ್ತು ಸನ್ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವನ್ನಾಗಿ ಸ್ವೀಕರಿಸುವುದಿಲ್ಲ ಮತ್ತು ದುರ್ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವನ್ನಾಗಿ ಸ್ವೀಕರಿಸುತ್ತಾರೆ. ಇದು ಅವರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದುದರ ಮತ್ತು ಅವುಗಳ ಕುರಿತು ನಿರಾಕರಿಸಿದ್ದುದರ ಫಲವಾಗಿದೆ.
ಮತ್ತು ಯಾರು ನಮ್ಮ ದೃಷ್ಟಾಂತಗಳನ್ನು ಮತ್ತು ಪರಲೋಕದ ಭೇಟಿಯನ್ನು ನಿರಾಕರಿಸಿದರೋ ಅವರ ಸಕಲ ಕರ್ಮಗಳು ನಿಷ್ಫಲವಾಗಿ ಬಿಟ್ಟವು. ಅವರಿಗೆ ಅವರು ಮಾಡಿಕೊಳ್ಳುತ್ತಿದ್ದುದನ್ನೇ ಶಿಕ್ಷೆಯಾಗಿ ನೀಡಲಾಗುವುದು.
ಮೂಸಾರವರು ತೂರ್ ಯಾತ್ರೆ ಹೋದ ಬಳಿಕ ಅವರ ಜನತೆಯು ತಮ್ಮ ಆಭರಣಗಳಿಂದ ಒಂದು ಕರುವಿನ ಪ್ರತಿಮೆಯನ್ನು ಆರಾಧ್ಯವನ್ನಾಗಿ ಮಾಡಿಕೊಂಡರು. ಅದು ಶಬ್ದ ಹೊರಡಿಸುವ ಒಂದು ಅಸ್ಥಿ ಪಂಜರ, ಅದು ಅವರೊಂದಿಗೆ ಮಾತನಾಡುವುದಿಲ್ಲವೆಂದು ಮತ್ತು ಮಾರ್ಗದರ್ಶನ ಮಾಡುವುದಿಲ್ಲವೆಂದೂ ಅವರು ಕಂಡಿಲ್ಲವೇ? ಆದರೂ ಅವರು ಅದನ್ನು ಆರಾಧ್ಯನನ್ನಾಗಿ ಮಾಡಿಕೊಂಡರು ಮತ್ತು ಅಕ್ರಮಿಗಳಾಗಿ ಬಿಟ್ಟರು.
ಮತ್ತು ಅವರು (ಕರುವನ್ನು ಆರಾಧಿಸುವವರು) ಪಶ್ಚಾತ್ತಾಪ ಪಡುವವರಾದಾಗ ಮತ್ತು ತಾವು ನಿಜವಾಗಿಯು ಪಥಭ್ರಷ್ಟರಾಗಿದ್ದೇವೆಂದು ಅವರು ಮನಗಂಡಾಗ ಹೇಳಿದರು: ನಮ್ಮ ಪ್ರಭೂ, ನಮ್ಮ ಮೇಲೆ ಕರುಣೆ ತೋರದಿದ್ದರೆ ಮತ್ತು ನಮ್ಮ ಪಾಪವನ್ನು ಕ್ಷಮಿಸದಿದ್ದರೆ ಖಂಡಿತ ನಾವು ನಷ್ಟ ಹೊಂದುವವರಲ್ಲಾಗುವೆವು.