ನಿಶ್ಚಯವಾಗಿಯೂ ನಾವು ನಿಮಗಿಂತ ಮೊದಲು ಅನೇಕ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಅವರ ಪೈಕಿ ಕೆಲವರ ವೃತ್ತಾಂತಗಳನ್ನು ನಿಮಗೆ ವಿವರಿಸಿಕೊಟ್ಟಿರು ತ್ತೇವೆ ಇನ್ನು ಕೆಲವರ ವೃತ್ತಾಂತಗಳನ್ನು ನಿಮಗೆ ನಾವು ವಿವರಿಸಿಲ್ಲ. ಅಲ್ಲಾಹನ ಅಪ್ಪಣೆ ಇಲ್ಲದೆ ಯಾವೊಬ್ಬ ಸಂದೇಶವಾಹಕನು ಯಾವ ದೃಷ್ಟಾಂತವನ್ನು ತರಲಾರನು. ಅನಂತರ ಅಲ್ಲಾಹನ ಆದೇಶ ಬಂದರೆ ಸತ್ಯದೊಂದಿಗೆ ತೀರ್ಮಾನ ಮಾಡಲಾಗುವುದು. ಅಲ್ಲಿ ಮಿಥ್ಯವಾದಿಗಳು ನಷ್ಟದಲ್ಲಿರುವರು.
ಮತ್ತು ಅವುಗಳಲ್ಲಿ ನಿಮಗೆ ಇನ್ನೂ ಅನೇಕ ಪ್ರಯೋಜನಗಳಿವೆ ಇದು ನೀವು ನಿಮ್ಮ ಮನಗಳಲ್ಲಿರುವ ಅಗತ್ಯಗಳನ್ನು ಅವುಗಳ ಮೇಲೆ ಸಂಚರಿಸಿ ಪೂರೈಸಲೆಂದಾಗಿದೆ. ಆ ಜಾನುವಾರುಗಳ ಮೇಲೂ ಮತ್ತು ಹಡಗಿನ ಮೇಲೂ ನಿಮ್ಮನ್ನು ಒಯ್ಯಲಾಗುತ್ತದೆ.
ಅವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚಿನವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಲಿಲ್ಲವೇ? ಅವರು ಇವರಿಗಿಂತ ಹೆಚ್ಚು ಸಂಖ್ಯೆಯುಳ್ಳವರು. ಶಕ್ತಿ ಸಾಮರ್ಥ್ಯದಲ್ಲಿ ಬಲಿಷ್ಠರು ಮತ್ತು ಭೂಮಿಯಲ್ಲಿ ಅನೇಕ ಸ್ಮಾರಕಗಳನ್ನು ಬಿಟ್ಟು ಹೋದವರಾಗಿದ್ದರು. ಅವರು ಮಾಡಿದ ಕಾರ್ಯಗಳು ಅವರಿಗೆ ಯಾವ ಪ್ರಯೋಜನವನ್ನೂ ನೀಡಲಿಲ್ಲ.
ಕೊನೆಗೆ ಅವರ ಬಳಿಗೆ ಅವರ ಸಂದೇಶವಾಹಕರು ಸುಸ್ಪಷ್ಟ ಪುರಾವೆಗಳೊಂದಿಗೆ ಬಂದಾಗ ತಮ್ಮ ಬಳಿಯಿದ್ದ ಜ್ಞಾನದಲ್ಲೇ ಅವರು ಹೆಮ್ಮೆ ಪಡುತ್ತಿದ್ದರು ಮತ್ತು ಅವರು ಯಾವುದನ್ನು ಪರಿಹಾಸ್ಯ ಮಾಡುತ್ತಿದ್ದರೋ ಅದುವೇ ಅವರನ್ನು ಸುತ್ತುವರಿದು ಬಿಟ್ಟಿತು.
ಅವರು ನಮ್ಮ ಶಿಕ್ಷೆಯನ್ನು ಕಂಡಾಗ ನಾವು ಏಕೈಕ ಅಲ್ಲಾಹನಲ್ಲಿ ವಿಶ್ವಾಸವಿರಿಸಿದೆವು. ಮತ್ತು ಅವನಿಗೆ ಸಹಭಾಗಿಗಳನ್ನಾಗಿ ನಿಶ್ಚಯಿಸುತ್ತಿದ್ದ ದೇವರುಗಳನ್ನು ನಿರಾಕರಿಸಿಬಿಟ್ಟೆವು ಎಂದು ಹೇಳತೊಡಗಿದರು.
ಆದರೆ ಅವರು ನಮ್ಮ ಶಿಕ್ಷೆಯನ್ನು ಕಂಡ ಬಳಿಕ ಅವರ ವಿಶ್ವಾಸವು ಅವರಿಗೆ ಯಾವ ಪ್ರಯೋಜನವನ್ನೂ ನೀಡಲಿಲ್ಲ. ಇದು ಅಲ್ಲಾಹನು ತನ್ನ ದಾಸರ ವಿಚಾರದಲ್ಲಿ ಮೊದಲಿನಿಂದಲೇ ಜಾರಿಯಲ್ಲಿರಿಸಿದ್ದ. ಒಂದು ನಿಶ್ಚಿತ ಸಂಪ್ರದಾಯವಾಗಿತ್ತು ಮತ್ತು ಅಲ್ಲಿ ಸತ್ಯನಿಷೇಧಿಗಳು ನಷ್ಟ ಹೊಂದಿದವರಾದರು.