ಮತ್ತು ಜನರಿಗೆ ನಾವು ಅವರ ಮೇಲೆ ಎರಗಿದ ವಿಪತ್ತಿನ ತರುವಾಯ ಯಾವುದಾದರೂ ಕಾರುಣ್ಯದ ಸವಿಯನ್ನುಣಿಸಿದಾಗ ಅವರು ಕೂಡಲೇ ನಮ್ಮ ದೃಷ್ಟಾಂತಗಳ ಬಗ್ಗೆ ಕುತಂತ್ರಗಳನ್ನು ನಡೆಸತೊಡಗುತ್ತಾರೆ. ನೀವು ಹೇಳಿರಿ ಅಲ್ಲಾಹನು ತಂತ್ರದಲ್ಲಿ ಅತೀ ಶೀಘ್ರನಾಗಿರುತ್ತಾನೆ. ನಿಶ್ಚಯವಾಗಿಯೂ ನಮ್ಮ ದೇವಚರರು ನಿಮ್ಮ ಸಕಲ ಕುತಂತ್ರಗಳನ್ನು ದಾಖಲಿಸುತ್ತಿರುತ್ತಾರೆ.
ನಿಮ್ಮನ್ನು ನೆಲ ಜಲಗಳಲ್ಲಿ ಸಾಗಿಸುವವನು ಅಲ್ಲಾಹನೇ ಆಗಿರುವನು. ನೀವು ಹಡಗಿನಲ್ಲಿ ಪ್ರಯಾಣಿಸುತ್ತಿರುವಾಗ ಮತ್ತು ಆ ಹಡಗು ಜನರನ್ನು ಹೊತ್ತುಕೊಂಡು ಅನುಕೂಲಕರ ಮಾರುತದ ಮೂಲಕ ಸಂಚರಿಸುತ್ತಿರುವಾಗ ಅವರು ಇದರಿಂದ ಸಂತಸದಿAದಿರುವಾಗ ಹಠಾತ್ತನೆ ಅವರ ಮೇಲೆ ಭಾರಿ ಬಿರುಗಾಳಿಯು ಬಂದು ಎಲ್ಲಾ ಕಡೆಯಿಂದಲೂ ಅಲೆಗಳು ಅಪ್ಪಳಿಸುತ್ತಿರುವಾಗ ಮತ್ತು ನಾವು ಆವರಿಸಲ್ಪಟ್ಟಿವೆಂದು ಅವರು ಮನಗಾಣುತ್ತಾರೆ. (ಆ ಸಂದರ್ಭದಲ್ಲಿ) ಎಲ್ಲರೂ ನಿಷ್ಕಳಂಕ ವಿಶ್ವಾಸದೊಂದಿಗೆ “ನೀನು ನಮ್ಮನ್ನು ಇದರಿಂದ ಪಾರು ಮಾಡಿದರೆ ಖಂಡಿತವಾಗಿಯು ನಾವು ಕೃತಜ್ಞರಲ್ಲಾಗಿಬಿಡುವೆವು ಎಂದು ಅಲ್ಲಾಹನನ್ನೇ ಪ್ರಾರ್ಥಿಸುತ್ತಾರೆ”
ಅನಂತರ ಅಲ್ಲಾಹನು ಅವರನ್ನು ಪಾರುಮಾಡಿದಾಗ ಕೂಡಲೇ ಅವರು ಭೂಮಿಯಲ್ಲಿ ಅನ್ಯಾಯವಾಗಿ ಬಂಡಾಯ ವೆಸಗತೊಡಗುತ್ತಾರೆ. ಓ ಜನರೇ ! ನಿಮ್ಮ ಬಂಡಾಯವು ನಿಮಗೆ ಆಪತ್ತಾಗಿಬಿಡಲಿದೆ. ಇದು ಇಹಲೋಕ ಜೀವನದ ತಾತ್ಕಾಲಿಕ ಸುಖಸೌಕರ್ಯ ಮಾತ್ರ. ಅನಂತರ ನಿಮಗೆ ನಮ್ಮ ಬಳಿಗೆ ಮರಳಲಿಕ್ಕಿರುವುದು. ಆಮೇಲೆ ನಾವು ನಿಮಗೆ ನಿಮ್ಮ ಕೃತ್ಯಗಳನ್ನೆಲ್ಲಾ ತಿಳಿಸಿಕೊಡುವೆವು.
ವಾಸ್ತವದಲ್ಲಿ ಐಹಿಕ ಜೀವನದ ಉದಾಹರಣೆಯು ಆಕಾಶದಿಂದ ನಾವು ಸುರಿಸಿರುವಂತಹಾ ಮಳೆಯಂತಿದೆ. ಬಳಿಕ ಅದರೊಂದಿಗೆ ಮನುಷ್ಯರು ಮತ್ತು ಪ್ರಾಣಿಗಳು ತಿನ್ನುವ ಭೂಮಿಯ ಬೆಳೆಗಳು ಮಿಶ್ರಿತಗೊಂಡು ಹುಲುಸಾಗಿ ಬೆಳೆದವು. ಕೊನೆಗೆ ಭೂಮಿಯು ತನ್ನ ಸಂಪೂರ್ಣ ಶೋಭಾಲಂಕಾರವನ್ನು ಪಡೆದಾಗ ಹಾಗು ಸುಂದರವಾಗಿ ಕಂಗೊಳಿಸಿದಾಗ ಮತ್ತು ಅದರ ಮೇಲೆ ನಾವು ಸಾಮರ್ಥ್ಯವುಳ್ಳವರೆಂದು ಅದರ ಮಾಲೀಕರು ಭಾವಿಸಿಕೊಂಡಾಗ ನಮ್ಮ ಕಡೆಯಿಂದ ಒಂದು ಆಜ್ಞೆಯು(ಶಿಕ್ಷೆಯು) ರಾತ್ರಿ ಅಥವ ಹಗಲಿನ ವೇಳೆಯಲ್ಲಿ ಬಂದುಬಿಟ್ಟಿತು. ಕೊನೆಗೆ ನಾವದನ್ನು ನಿನ್ನೆಯ ದಿನ ಇರಲೇ ಇಲ್ಲವೆಂಬAತೆ ಸಂಪೂರ್ಣವಾಗಿ ನಿರ್ನಾಮ ಮಾಡಿಬಿಟ್ಟೆವು, ಇದೇ ಪ್ರಕಾರ ನಾವು ಚಿಂತಿಸುವ ಜನರಿಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆ.