[1] ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನನಕ್ಕಿಂತ ಕೆಲವೇ ತಿಂಗಳ ಹಿಂದೆ ಸಂಭವಿಸಿದ ಒಂದು ಘಟನೆಯನ್ನು ಇಲ್ಲಿ ತಿಳಿಸಲಾಗಿದೆ. ಅಂದು ಯಮನ್ ರಾಜ್ಯವು ಇಥಿಯೋಪಿಯಾ ದೇಶದ ರಾಜನ ವಶದಲ್ಲಿತ್ತು. ಯಮನ್ ರಾಜ್ಯವನ್ನು ಅವನ ಅಧೀನದಲ್ಲಿದ್ದ ಅಬ್ರಹತ್ ಎಂಬ ಅರಸ ಆಳುತ್ತಿದ್ದನು. ಯಮನ್ನಲ್ಲಿ ಮಹಾ ದೇವಾಲಯವೊಂದನ್ನು ನಿರ್ಮಿಸಿ ಅದನ್ನು ಅರಬ್ಬರ ತೀರ್ಥಾಟನಾ ಕೇಂದ್ರವಾಗಿ ಮಾಡಿ ಅವರ ಗಮನವನ್ನು ಕಅಬಾಲಯದಿಂದ ಯಮನ್ಗೆ ತಿರುಗಿಸಬೇಕೆಂದು ಆತ ಯೋಜನೆ ಹಾಕಿದ್ದ. ಆದರೆ ಅರಬ್ಬರು ಅದನ್ನು ತಿರಸ್ಕರಿಸಿದ್ದರಿಂದ ಹತಾಶನಾದ ಆತ ಕಅಬಾಲಯವನ್ನೇ ಕೆಡವಿ ಹಾಕಲು ಆನೆಯ ಸೈನ್ಯದೊಂದಿಗೆ ಮಕ್ಕಾಗೆ ಹೊರಟ. ಕಅಬಾಲಯದ ಪರಿಪಾಲಕರಾಗಿದ್ದ ಕುರೈಶರಿಗೆ ಅವನ ಮಹಾ ಸೈನ್ಯವನ್ನು ಎದುರಿಸುವ ತಾಕತ್ತಿರಲಿಲ್ಲ. ಪ್ರತಿರೋಧಿಸಲು ಸಾಧ್ಯವಾಗದ್ದರಿಂದ ಅವರು ಅದರ ಸಂರಕ್ಷಣೆಯ ಭಾರವನ್ನು ಅಲ್ಲಾಹನಿಗೆ ವಹಿಸಿಕೊಟ್ಟು ಗುಡ್ಡಗಳಿಗೆ ಹೋಗಿ ನೆಲೆಸಿದರು. ಈ ಸಂದರ್ಭದಲ್ಲಿ ಅಸಾಮಾನ್ಯ ಘಟನೆಯ ಮೂಲಕ ಅಲ್ಲಾಹು ಅಬ್ರಹತ್ನ ಸೈನ್ಯವನ್ನು ನಾಶ ಮಾಡಿದನು. ಸುಟ್ಟ ಜೇಡಿ ಮಣ್ಣಿನ ಕಲ್ಲುಗಳನ್ನು ಅವರ ಮೇಲೆಸೆಯಲು ಅಲ್ಲಾಹು ಹಕ್ಕಿಗಳ ಗುಂಪುಗಳನ್ನು ಕಳುಹಿಸಿದನು. ಆ ಕಲ್ಲುಗಳು ಅವರನ್ನು ನಾಶ ಮಾಡಿದವು. ಪವಿತ್ರ ಕಅಬಾಲಯಕ್ಕೆ ಯಾವುದೇ ಹಾನಿಯಾಗದೆ ದಾಳಿಕೋರರು ನಾಶವಾದರು. ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಪ್ರವಾದಿಯಾದ ಆರಂಭಕಾಲದಲ್ಲಿ ಕುರೈಶರು ಅಬ್ರಹತ್ನ ಈ ನಾಶವನ್ನು ತಮ್ಮ ಇತಿಹಾಸದಲ್ಲಿ ಜರಗಿದ ಮಹಾ ಘಟನೆಯೆಂದು ಪರಿಗಣಿಸಿದ್ದರು.