ಅಲಿಫ್ ಲಾಮ್ ಮೀಮ್ ರಾ. ಇವು ಗ್ರಂಥದ ವಚನಗಳು. ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಏನು ಅವತೀರ್ಣವಾಗಿದೆಯೋ ಅದು ಸತ್ಯವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ವಿಶ್ವಾಸವಿಡುವುದಿಲ್ಲ.
ನೀವು ನೋಡುತ್ತಿರುವಂತೆ ಯಾವುದೇ ಸ್ಥಂಭಗಳ ಆಧಾರವಿಲ್ಲದೆ ಆಕಾಶವನ್ನು ಎತ್ತಿ ನಿಲ್ಲಿಸಿದವನೇ ಅಲ್ಲಾಹು. ನಂತರ ಅವನು ಸಿಂಹಾಸನದಲ್ಲಿ ಆರೂಢನಾದನು. ಅವನು ಸೂರ್ಯ-ಚಂದ್ರರನ್ನು ಅಧೀನಗೊಳಿಸಿದ್ದಾನೆ. ಎಲ್ಲವೂ ಒಂದು ನಿಗದಿತ ಅವಧಿಯ ತನಕ ಚಲಿಸುತ್ತಿರುವುವು. ಅವನು ಎಲ್ಲಾ ವಿಷಯಗಳನ್ನು ನಿಯಂತ್ರಿಸುತ್ತಾನೆ. ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವ ವಿಷಯದಲ್ಲಿ ದೃಢವಿಶ್ವಾಸಿಗಳಾಗುವುದಕ್ಕಾಗಿ ಅವನು ತನ್ನ ದೃಷ್ಟಾಂತಗಳನ್ನು ಸ್ಪಷ್ಟವಾಗಿ ವಿವರಿಸಿಕೊಡುತ್ತಿದ್ದಾನೆ.
ಭೂಮಿಯನ್ನು ವಿಸ್ತರಿಸಿದವನು ಅವನೇ. ಅವನು ಅದರಲ್ಲಿ ಪರ್ವತಗಳನ್ನು ಮತ್ತು ನದಿಗಳನ್ನು ಸೃಷ್ಟಿಸಿದನು. ಎಲ್ಲಾ ವಿಧ ಹಣ್ಣುಗಳಲ್ಲೂ ಅವನು ಎರಡೆರಡು ಜೋಡಿಗಳನ್ನು ಸೃಷ್ಟಿಸಿದನು.[1] ಅವನು ರಾತ್ರಿಯನ್ನು ಹಗಲಿನ ಮೇಲೆ ಮುಚ್ಚುತ್ತಾನೆ. ಆಲೋಚಿಸುವ ಜನರಿಗೆ ಅದರಲ್ಲಿ ಖಂಡಿತ ದೃಷ್ಟಾಂತಗಳಿವೆ.
[1] ಇದರ ಒಂದು ಅರ್ಥ ಏನೆಂದರೆ ಅಲ್ಲಾಹು ಎಲ್ಲಾ ಹಣ್ಣುಗಳಲ್ಲೂ ಗಂಡು-ಹೆಣ್ಣುಗಳನ್ನು ಸೃಷ್ಟಿಸಿದ್ದಾನೆ. ಇನ್ನೊಂದು ಅರ್ಥವೇನೆಂದರೆ, ಅವನು ಎಲ್ಲಾ ಹಣ್ಣುಗಳನ್ನು ವಿಭಿನ್ನ ಗುಣಗಳಲ್ಲಿ ಸೃಷ್ಟಿಸಿದ್ದಾನೆ. ಉದಾಹರಣೆಗೆ, ಸಿಹಿ-ಕಹಿ, ಉಷ್ಣ-ತಂಪು, ಕಪ್ಪು-ಬಿಳಿ ಇತ್ಯಾದಿ.
ಭೂಮಿಯಲ್ಲಿ ಒಂದಕ್ಕೊಂದು ತಾಗಿಕೊಂಡಿರುವ ವಿಭಿನ್ನ ಜಮೀನುಗಳು, ದ್ರಾಕ್ಷಿ ತೋಟಗಳು, ಹೊಲಗಳು, ರೆಂಭೆಗಳಿರುವ ಮತ್ತು ರೆಂಭೆಗಳಿಲ್ಲದ ಖರ್ಜೂರ ಮರಗಳು ಇವೆ. ಇವೆಲ್ಲದ್ದಕ್ಕೂ ಒಂದೇ ನೀರನ್ನು ಉಣಿಸಲಾಗುತ್ತದೆ. ಆದರೂ ಅವುಗಳ ಹಣ್ಣುಗಳಲ್ಲಿ ಒಂದಕ್ಕೆ ಇನ್ನೊಂದಕ್ಕಿಂತ ಶ್ರೇಷ್ಠತೆಯನ್ನು ನೀಡುತ್ತೇವೆ. ಅರ್ಥಮಾಡಿಕೊಳ್ಳುವ ಜನರಿಗೆ ಅದರಲ್ಲಿ ಖಂಡಿತ ದೃಷ್ಟಾಂತಗಳಿವೆ.
ನಿಮಗೆ ಅಚ್ಚರಿಯಾಗುವುದಾದರೆ, ವಾಸ್ತವದಲ್ಲಿ ಅವರು ಹೇಳುವ “ನಾವು ಮಣ್ಣಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಸೃಷ್ಟಿಸಲಾಗುವುದೇ?” ಎಂಬ ಮಾತು ಹೆಚ್ಚು ಅಚ್ಚರಿದಾಯಕವಾಗಿದೆ. ಅವರೇ ಅವರ ಪರಿಪಾಲಕನನ್ನು (ಅಲ್ಲಾಹನನ್ನು) ನಿಷೇಧಿಸಿದವರು. ಅವರ ಕಂಠಗಳಲ್ಲಿ ಸಂಕೋಲೆಗಳಿವೆ. ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.