ಅವರ ಬಳಿಗೆ ದೇವದೂತರುಗಳು ಬರುವುದನ್ನು ಅಥವಾ ಅವರ ಪರಿಪಾಲಕನು (ಅಲ್ಲಾಹು) ಬರುವುದನ್ನು ಅಥವಾ ಅವರ ಪರಿಪಾಲಕನ (ಅಲ್ಲಾಹನ) ಕೆಲವು ದೃಷ್ಟಾಂತಗಳು ಬರುವುದನ್ನಲ್ಲದೆ ಅವರು ಬೇರೆ ಏನನ್ನು ಕಾಯುತ್ತಿದ್ದಾರೆ? ನಿಮ್ಮ ಪರಿಪಾಲಕನ (ಅಲ್ಲಾಹನ) ಕೆಲವು ದೃಷ್ಟಾಂತಗಳು ಬರುವ ದಿನದಂದು, ಅದಕ್ಕಿಂತ ಮೊದಲು ಸತ್ಯವಿಶ್ವಾಸಿಯಾದವನು ಅಥವಾ ಸತ್ಯವಿಶ್ವಾಸದಿಂದ ಏನಾದರೂ ಒಳಿತು ಮಾಡಿದವನ ಹೊರತು ಬೇರೆ ಯಾರಿಗೂ ಅವನ ವಿಶ್ವಾಸವು ಉಪಕಾರ ಮಾಡುವುದಿಲ್ಲ. ಹೇಳಿರಿ: “ನೀವು ಕಾಯಿರಿ, ನಿಶ್ಚಯವಾಗಿಯೂ ನಾವು ಕೂಡ ಕಾಯುತ್ತೇವೆ.”
ತಮ್ಮ ಧರ್ಮವನ್ನು ಒಡೆದು ವಿವಿಧ ಪಂಗಡಗಳಾಗಿ ಬೇರ್ಪಟ್ಟವರು ಯಾರೋ—ಅವರೊಂದಿಗೆ ನಿಮಗೆ ಯಾವುದೇ ಸಂಬಂಧವಿಲ್ಲ. ಅವರ ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದು. ಅವರು ಮಾಡುತ್ತಿದ್ದ ಕರ್ಮಗಳನ್ನು ನಂತರ ಅವನು ಅವರಿಗೆ ತಿಳಿಸಿಕೊಡುವನು.
ಯಾರು ಒಂದು ಒಳಿತನ್ನು ತರುತ್ತಾನೋ ಅವನಿಗೆ ಅದರ ಹತ್ತು ಪಟ್ಟು ಪ್ರತಿಫಲವಿದೆ. ಯಾರು ಒಂದು ಕೆಡುಕನ್ನು ತರುತ್ತಾನೋ ಅವನಿಗೆ ಅದಕ್ಕೆ ಸಮಾನವಾದ ಶಿಕ್ಷೆಯನ್ನು ಮಾತ್ರ ನೀಡಲಾಗುವುದು. ಅವರಿಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.
ಹೇಳಿರಿ: “ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ನನಗೆ ನೇರಮಾರ್ಗವನ್ನು—ಏಕನಿಷ್ಠರಾದ ಇಬ್ರಾಹೀಮರ ನೇರ ಧರ್ಮವನ್ನು ತೋರಿಸಿದ್ದಾನೆ. ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.”
ಹೇಳಿರಿ: “ಅಲ್ಲಾಹು ಸರ್ವ ವಸ್ತುಗಳ ಪರಿಪಾಲಕನಾಗಿರುವಾಗ, ನಾನು ಅವನ ಹೊರತು ಬೇರೆ ಪರಿಪಾಲಕರನ್ನು ಹುಡುಕಬೇಕೇ? ಪ್ರತಿಯೊಬ್ಬನೂ ತಾನು ಮಾಡಿದ ಕರ್ಮಕ್ಕೆ ಉತ್ತರದಾಯಿಯಾಗಿದ್ದಾನೆ. ಪಾಪಗಳ ಭಾರವನ್ನು ಹೊರುವ ಯಾರೂ ಇತರರು ಮಾಡಿದ ಪಾಪಗಳ ಭಾರವನ್ನು ಹೊರುವುದಿಲ್ಲ. ನಂತರ ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳುವಿರಿ. ಆಗ ನೀವು ಯಾವ ವಿಷಯದಲ್ಲಿ ಭಿನ್ನಮತ ತಳೆದಿರೋ ಅದನ್ನು ಅವನು ನಿಮಗೆ ತಿಳಿಸಿಕೊಡುವನು.”
ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದು ಅವನೇ. ಅವನು ನಿಮಗೆ ನೀಡಿದ ಅನುಗ್ರಹಗಳಲ್ಲಿ ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ನಿಮ್ಮಲ್ಲಿ ಕೆಲವರಿಗೆ ಇತರ ಕೆಲವರಿಗಿಂತ ಶ್ರೇಷ್ಠ ಸ್ಥಾನಮಾನಗಳನ್ನು ನೀಡಿದನು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅತಿವೇಗವಾಗಿ ಶಿಕ್ಷೆ ನೀಡುತ್ತಾನೆ ಮತ್ತು ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.